Thursday 28 January 2016

ಪಶ್ಚಾತ್ತಾಪದ ನಿಟ್ಟುಸಿರು ಅವನಿಗೆ ಮಾತ್ರನಾ?

ಬಿ ಪ್ರಾಕ್ಟಿಕಲ್ ಅನ್ನೋ ಹುಡುಗಿ. ನಾಳೆಯ ಬಗ್ಗೆ ಚಿಂತಿಸಿ ಗುಣಿಸಿ, ಭಾಗಿಸಿ, ಲೆಕ್ಕಾಚಾರ ಹಾಕಿಯೇ ಮುಂದಿಡಿಯಿಡುವ ಹುಡುಗ. ಇಬ್ಬರಿಗೂ ಎತ್ತಣದಿಂತ್ತೆಣ ಸಾಮೀಪ್ಯ. ಆದರೂ ಅದಮ್ಯವಾಗಿ ಪ್ರೀತಿಸಿದ್ರು, ದೂರನೂ ಆಗ್ಬಿಟ್ರು. ಅಯ್ಯೋ, ಹೀಗದೆಲ್ಲಾ ಕಾಮನ್ ಆಗ್ಬಿಟ್ಟಿದೆ ಬಿಡಿ. ಇವತ್ತು ಇವರ ಜತೇಲಿದ್ದವರು ನಾಳೆ ಇನ್ನೊಬ್ಬರ ಜತೆ ಗುರುತಿಸ್ಕೋತಾರೆ ಅನ್ನುವವರ ಮಧ್ಯೆ, ಕಳೆದ ಎರಡು ವರ್ಷಗಳಿಂದಲೂ ಇಬ್ಬರು ಖಾಸಾ ಒಂಟಿಯಾಗಿಯೇ ಉಳಿದಿದ್ದಾರೆ. ಪರಸ್ಪರರಿಬ್ಬರೂ ವಿರುದ್ಧ ದಿಕ್ಕುಗಳು ಅನ್ನೋದೆನೋ ನಿಜ. ಆದರೆ ಅಷ್ಟು ಗಾಢವಾಗಿ ಹಗಲು ರಾತ್ರಿಗಳ ಪರಿವೆಯೇ ಇಲ್ಲದೆ ಪ್ರೀತಿಸಿದ್ದವರು ಹೀಗ್ಯಾಕಾದ್ರೂ? ಅವರೇನು ಟೀನೇಜ್ ಲವರ್ಸ್ ಅಲ್ಲ. ಪ್ರೀತಿ ಹುಟ್ಟಿದ್ದು, ಕಾಲೇಜಿನಲ್ಲೋ, ಕೆಲಸ ಮಾಡುವ ಸ್ಥಳದಲ್ಲೋ ಅಲ್ಲ. ಇಬ್ಬರು ಪ್ರಬುದ್ಧರು, ಜವಾಬ್ದಾರಿಗಳ ಮೂಟೆಯನ್ನು ಹೆಗಲ ಮೇಲಿರಿಸಿಕೊಂಡೇ ಸಾಂಗತ್ಯಕ್ಕೆ ಕೈ ಚಾಚಿ ನಿಂತವರು. ಪರಸ್ಪರರಿಬ್ಬರಿಗೂ ತಮ್ಮ ಅಭಿರುಚಿ, ನಿರ್ಧಾರಗಳ ಬಗ್ಗೆ ಗೌರವವಿದ್ದೆ ಪ್ರೀತಿಗೆ ಅನುಮತಿ ನೀಡಿದ್ದರು. ಆದರೂ, ಇದ್ದಕ್ಕಿದ್ದ ಹಾಗೇ ಒಂದು ದಿನ ಇಬ್ಬರೂ ಪರಿಚಯವೇ ಇಲ್ಲದವರಂತೆ ಉಳಿದುಬಿಟ್ಟರು. ಬೇರಾಗಿದ್ದು ಒಂದೇ ಮಾತಿಗೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಅವಳದಲ್ಲದ ತಪ್ಪಿಗೆ ಆತ ನೀನು ನನಗೆ ಸಿಗಬಾರದಿತ್ತು. ಅಂದು ನೀನು ನನಗೆ ಸಿಗದೇ ಇದ್ದಿದ್ದರೇ ನನ್ನ ಬದುಕಿನಲ್ಲಿ ಹೀಗೆಲ್ಲಾ ಆಗ್ತಾ ಇರಲಿಲ್ಲ ಎಂದಿದ್ದ. ಅಷ್ಟೇ! ಅವನೆಡೆಗಿನ ಪ್ರೀತಿ ತೊರೆದು, ಆಕೆ ಶಾಶ್ವತ ಮೌನಕ್ಕೆ ಶರಣಾಗಿದ್ದಳು.
ಅವಳೇನು ಅಂತ ಮಾಡಬಾರದ ತಪ್ಪನ್ನೇನೂ ಮಾಡಿರಲಿಲ್ಲ. ಇಬ್ಬರೂ ತಮ್ಮ ಪಾಡಿಗೆ ತಾವು ಅವರವರ ಕೆಲಸಗಳಲ್ಲಿ ಮುಳುಗಿದ್ದರೂ, ಸಿಗುವ ಅಲ್ಪ ಘಳಿಗೆಯಲ್ಲಿ ಅವನ ಸಾಮೀಪ್ಯ, ಒಡನಾಟ ಬಯಸಿದ್ದಳು. ಎಲ್ಲವನ್ನು, ಎಲ್ಲರನ್ನು ತೊರೆದು ಬದುಕುತ್ತಿರುವಾಕೆ. ಬದುಕು ಆಕೆಗೆ ಪ್ರಾಕ್ಟಿಕಲ್ ಆಗಿರುವುದನ್ನ ರಕ್ತಗತವಾಗಿಯೇ ಕಲಿಸಿದೆ ಎನ್ನುವಷ್ಟರ ಮಟ್ಟಿಗೆ ಹೊರಜಗತ್ತಿಗೆ ಪ್ರಾಕ್ಟಿಕಲ್ ಹೌದು. ಆದರೆ, ಒಳಮನಸ್ಸೊಂದು ಭಾವನೆಗಳ ತುಡಿತಕ್ಕೆ ಅವನ ಸಾಂಗತ್ಯ ಯಾವಾಗಲೂ ಅಲ್ಲದಿದ್ದರೂ, ಸಮಯ ಸಿಕ್ಕಾಗಲೆಲ್ಲಾ ಬೇಡುತ್ತಲೇ ಇತ್ತು. ಆದರೆ, ಆತನಿಗೆ ಯಾವುದರಲ್ಲೂ ಆಸಕ್ತಿಯಿಲ್ಲ. ಅರ್ಥಾತ್ ಅವಳ ಮೇಲೂ...! ಮಾತೆತ್ತಿದರೆ ನೀನಂದು ನನಗೆ ಸಿಗಬಾರದಿತ್ತು. ಬದುಕಲ್ಲಿ ನೀ ಬಂದು ಅದೇನೆಲ್ಲಾ ಆಗಿ ಹೋಯ್ತು ಅನ್ನುವ ಮಂತ್ರ ಪಠಣ ಮಾಡುತ್ತಿರುತ್ತಾನೆ.


**
ಒಂದು ವರ್ಷದ ಹಿಂದಿನ ಮಾತು. ಆ ಹುಡುಗ-ಹುಡುಗಿ ನಾವಿಬ್ರೂ ಪಕ್ಕ ದೋಸ್ತ್‍ಗಳು ಅಂತ ಹೇಳ್ಕೊಂಡೇ ಓಡಾಡ್ಕೋಡಿಂದ್ರು. ಆದರೆ, ಇಬ್ಬರು ಪ್ರೀತಿಸ್ತಿದ್ದಾರೆ ಅಂಥ ಜಗತ್ತಿಗೆ ಗೊತ್ತಿತ್ತು. ಅದು ಅಕ್ಷರಶಃ ನಿಜವೂ ಆಗಿತ್ತು. ಒಂದಿನ ಇಬ್ರೂ ರಿಜಿಸ್ಟ್ರಾರ್ ಮದುವೆ ಆದ್ರೂ ಅಂತ ಕೇಳ್ಪಟ್ಟೆ. ಅದಾದ ಸರಿಸುಮಾರು 5-6 ತಿಂಗಳಾಗಿತ್ತೇನೋ ಆಗಲೇ ಡಿವೋರ್ಸ್‍ಗಾಗಿ ಆ ಹುಡುಗ ಓಡಾಡ್ತಿದ್ದಾನೆ ಅನ್ನೋ ವಿಷಯ ಗೊತ್ತಾಯ್ತು. ಅಷ್ಟೆಲ್ಲಾ ಗಾಢವಾಗಿ ಪ್ರೀತ್ಸಿ, ಪರಸ್ಪರರಿಬ್ಬರು ಅಭಿರುಚಿಗಳ ಬಗ್ಗೆ ಅರ್ಥ ಮಾಡಿಕೊಂಡು ಮದುವೆ ಆಗಿ ಯಾಕಿಗಾದ್ರೂ ಅಂದ್ರೆ, ಮನೆಯವರು ಅವಳಿಗಿಂತ ಚೆಂದದ, ಶ್ರೀಮಂತ ಮನೆಯ ಹುಡುಗಿಯನ್ನು ಮದುವೆ ಮಾಡೋಕೆ ನಿಶ್ಚಯಿಸಿದ್ದರಂತೆ. ಆ ಕಡೆ ಮನವೊಲಿದು, ಈಕೆಗೆ ನೀನು ಸಿಗದೇ ಹೋಗಿದ್ರೆ, ನಾನು ಆ ಹುಡುಗೀನಾ ಮದ್ವೆ ಆಗಿ ಲೈಫ್ ಸೆಟ್ಲ್ ಮಾಡ್ಕೊತ್ತಿದ್ದೆ ಅಂತಾ ಇದ್ದನಂತೆ. ಅಷ್ಟಕ್ಕೆ ರೋಸಿ ಹೋಗಿ ಡಿವೋರ್ಸ್‍ಗೆ ಸಮ್ಮತಿಸಿದ್ದಾಳೆ. ಆಕೆ ಮನೆಯಲ್ಲಿಯೂ ಯಾವುದಕ್ಕೂ ಕಡಿಮೆಯಿರಲಿಲ್ಲ. ಒಪ್ಪಿದ್ದರೆ ಅವನಿಗಿಂತ ಚೆಂದದ ಹುಡುಗನ್ನ ನೋಡಿ ಮದ್ವೆ ಮಾಡ್ತಿದ್ದ್ರು. ಆದ್ರೆ ಆಕೆ ಯಾವತ್ತಿಗೂ ಆ ಬಗ್ಗೆ ಅಪ್ಪಿತಪ್ಪಿಯೂ ಸೊಲ್ಲೆತ್ತದವಳಲ್ಲ. ಮನೆಯವರ ವಿರೋಧದ ನಡುವೆಯೂ ಮದುವೆ ಆಗಿ ಬಂದಿದ್ದೀವಿ. ಇಬ್ಬರೂ ಚೆನ್ನಾಗಿ ಬದುಕಿ ತೋರಿಸೋಣ ಎನ್ನುವ ಉವಾಚ ಅವಳದು. ಅವನು   ಈಗ ಅವಳ ಯಾವ ಮಾತು ಕೇಳೋಕು ಅವನು ಕಿವುಡನಾಗಿಬಿಟ್ಟಿದ್ದಾನೆ. ಇತ್ತ ಕಡೆ ತವರು ಮನೆಯಿಂದಲೂ ಆಕೆ ನಿಷ್ಠುರವಾಗಿದ್ದಾಳೆ. ಆದರೆ ಇದ್ಯಾವುದರ ಗೊಡವೆಗೂ ತಲೆ ಕೆಡಿಸಿಕೊಳ್ಳದೇ ಅವಳನ್ನು ಧಿಕ್ಕರಿಸಿ ಬದುಕಲು ಅವನು ಸಕಲ ಸನ್ನದ್ಧನಾಗಿದ್ದಾನೆ.
ಯಾಕೆ ಹೀಗೆ ಗಂಡಿಗೆ ಸಿಗುವ ಕಾರಣಗಳು, ಹೆಣ್ಣಿಗೆ ಸಿಗುವುದಿಲ್ಲವಾ? ಪ್ರೀತಿಯ ಹೊಸತರಲ್ಲಿ ಅವಳ ಎಲ್ಲ ಚಲನ ವಲನಗಳೂ ಚೆಂದವೆನ್ನುತ್ತಿದ್ದ ಆತನಿಗೆ ಏನಾಗಿದೆ ಈಗ. ಅವಳು ದಕ್ಕುವ ಮುನ್ನ ಮೌನಕ್ಕೂ, ಪಿಸು ಮಾತಿಗೂ ದನಿಯಾಗಿ ನಿಲ್ಲುತ್ತಿದ್ದ ಅವನು ಅದೆಲ್ಲಿ ಮಾಯವಾಗಿಬಿಟ್ಟ. ಎಲ್ಲ ಸುಖ ಸೌಲಭ್ಯಗಳು ಬೇಕು ಎನ್ನುವವ ಅವಳನ್ನು ಪ್ರೀತಿಯಲ್ಲಿ ಯಾಕಾದರೂ ಕೆಡವಿಕೊಳ್ಳಬೇಕಿತ್ತು. ಮದುವೆಯಾಗಬೇಕಿತ್ತು. ಎಲ್ಲ ಆದ ಮೇಲೆ ಹೀಗೆ ಪಶ್ಚಾತ್ತಾಪದ ನಿಟ್ಟುಸಿರು ಬಿಟ್ಟು ಜೀವಮಾನವಿಡೀ ಅವಳನ್ನು ಕಣ್ಣೀರಿನಲ್ಲಿ ಕೈತೊಳೆಸಲು ಅಣಿಗೊಳಿಸಬೇಕಿತ್ತು. ಅಷ್ಟಕ್ಕೂ ಪಶ್ಚಾತ್ತಾಪದ ನಿಟ್ಟುಸಿರು ಅವನಿಗೆ ಮಾತ್ರನಾ?
 ಪ್ರೀತಿಸಿದೆ ಅನ್ನೋ ಒಂದೇ ಕಾರಣಕ್ಕೆ ಎಲ್ಲವನ್ನು ಅನುಸರಿಸಿ ಹೋದ ಅವಳಿಗೆ, ತಾನು ಅಂದಿದ್ದಕ್ಕೆಲ್ಲಾ ತಲೆತಗ್ಗಿಸಿ ಬಾಳ್ವೆ ನಡೆಸಬೇಕು   ಎಂಬ ಕಟ್ಟಳೆ ಹೇರೋದು ಅದೆಷ್ಟು ಸರಿ? ಅವನ ಚುಚ್ಚು ಮಾತುಗಳಿಗೆ ಕಿವಿಗೊಡುತ್ತಾ ಅವನೊಟ್ಟಿಗೆ ಹೆಜ್ಜೆ ಹಾಕಬೇಕು ಎನ್ನುವುದು ಯಾವ ನ್ಯಾಯ? ಇಷ್ಟಕ್ಕೂ ಬಂಧ ಬಿಡಿಸಿಕೊಳ್ಳಲೇಬೇಕು ಅಂತ ಅವಳಿಗೂ ಅನಿಸಿದ್ದರೆ ಹೇಳೋಕೆ ನೆಪಗಳಿಗೇನೂ ಬರವಿತ್ತಾ. ಹೇಳುತ್ತಾ ಹೋದರೆ ಪ್ರತಿ ಗುಕ್ಕಿಗೂ ಒಂದು ಸಕಾರಣ ಹುಡುಕಬಹುದಿತ್ತು. ಅವನು ಧಿಕ್ಕರಿಸುತ್ತಾನಲ್ಲ ಎನ್ನುವ ಅವಸರಕ್ಕೆ ಆಕೆಯೂ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಳಷ್ಟೇ. ಈಗಲೂ ಅವಳು ಅವನಿಷ್ಟಕ್ಕೆ ಸಿಕ್ಕ ಗಾಳ. ಅವನ ಒಪ್ಪಿಗೆ ಅಂತಿಮ ಠಸ್ಸೆ. ಅವನಿಷ್ಟಕ್ಕೆ ಅವಳು ಸರಿ ಎಂದು ತಲೆಯಾಡಿಸಿದ್ದಾಳೆ. ಆದರೂ ಅವಳ ಮನಸ್ಸಿನ ಮಾರ್ದನಿ ಗುಂಯ್‍ಗುಡುತ್ತಲೇ ಇದೆ. ನೆಪ ಮಾತ್ರಕಷ್ಟೆ ನಿನ್ನ ನೆನಪು ಹೌದು ಒಪ್ಪಿಕೊಳ್ಳುತ್ತೇನೆ. ಈಗಲೂ ಮರೆವನ್ನ ನಾನು ಅದಮ್ಯವಾಗಿ ಪ್ರೀತಿಸುತ್ತೇನೆ.

- ಭಾಚಿ 




Thursday 7 January 2016

ಬದುಕು ಹರಿವ ನದಿಯಂತೆ.....



ಮೊನ್ನೆಯಷ್ಟೇ ಗೆಳತಿಯೊಬ್ಬಳು ದಾರಿಯಲ್ಲಿ ಸಿಕ್ಕಿದ್ಲು. ತೀರಾ ಪರಿಚಯದ ಮುಖವೇನೂ ಅನಿಸಲಿಲ್ಲ. ಆದರೂ ಅದೇನೋ ಕುತೂಹಲ! ಎಲ್ಲಿಯೋ ನೋಡಿಂದಾಗಿದೇಯಲ್ಲಾ.. ನೋಡಿ ಸುಮಾರು ಹತ್ತು ವರ್ಷಗಳ ಮೇಲೆ ಆಗಿತ್ತು. ನೋಟಗಳು ಎದುರು ಬದುರು ಪುನಃ ಪುನಃ ದಿಟ್ಟಿಸಿದಾಗಲೇ ಅರಿವಿಗೇ ಬಂದದ್ದು. ಅವಳು ನನ್ನ ಪ್ರೈಮರಿ ಶಾಲೆಯ ಸಹಪಾಠಿ ಅಂಥ. ನಾನು ಮಾತನಾಡಿಸಲು ಮುಂದಾಗುವ ಹೊತ್ತಿಗೆ ಆಕೆಯೇ ಬಂದು ಮಾತನಾಡಿಸಿದಳು. ಹಾಯ್ ಹೇಗಿದಿಯಾ.. ನಾನು!
ನನಗೂ ಆಕೆಯ ಹೆಸರೇನೂ ನೆನಪಿರಲಿಲ್ಲ. ಮುಖಚರ್ಯೆ ಸ್ವಲ್ಪ ಪರಿಚಿತವೆನಿಸಿತ್ತಷ್ಟೇ. ಆಕೆ ಮಾತ್ರ ನನ್ನ ಹೆಸರು ನೆನಪಿಟ್ಟುಕೊಂಡಿದ್ದಳು. ಆದರೆ, ನಾನು ಹೆಸರಿನೊಂದಿಗೆ ಈಗ ಮುಂದುವರಿದ ಭಾಗವನ್ನು ಹೇಳಿ ಪರಿಚಯ ಮಾಡಿಕೊಂಡೆ. ಎಷ್ಟೆಲ್ಲಾ ಬದಲಾವಣೆ ತಂದಿಟ್ಟಿತ್ತು ಬದುಕು. ಬೌದ್ಧಿಕವಾಗಿ, ಆರ್ಥಿಕವಾಗಿ ಇಬ್ಬರೂ ತಂತಮ್ಮ ವ್ಯಾಪ್ತಿಯ ಇತಿ ಮಿತಿಯಲ್ಲಿ ಬೆಳೆದಿದ್ವಿ. ಆದರೂ, ಆ ಕ್ಷಣಕ್ಕೆ ಕೊಂಚ ಸ್ಟೇಟಸ್‍ಗಳ ಮಟ್ಟಿಗೆ ಮಾತು ಆರಂಭವಾದರೂ, ತದ ನಂತರದಲ್ಲಿ ಮಾತುಗಳು ಹೊರಳಿದ್ದು ನಮ್ಮ ಬಾಲ್ಯದೆಡೆಗೆ.. ನಮ್ಮ ಬಾಲ್ಯದ ದಿನಗಳ ಕಡೆಗೆ.. ಫಾರ್ಮಲಿಟಿ ಹೆಚ್ಚಿನ ಹೊತ್ತು ವರ್ಕ್‍ಔಟ್ ಆಗಲ್ಲ ಅನ್ನೋದಕ್ಕೆ ಇದೂ ಕೂಡ ಒಂದು ಉದಾಹರಣೆಯೇನೋ ದೇಹ ಅದೆಷ್ಟೇ ಬೆಳೆದಿದ್ದರೂ, ಮನಸ್ಸು ಗೆಳೆಯರ ಬಳಗಕ್ಕೆ ಸೇರಿಬಿಟ್ಟಾಗ ಮಗುವಂತೇ ಆಗಿಬಿಡುತ್ತೆ. ಅಲ್ಲಾಗಿದ್ದೂ ಅದೇ!
 ನಾವು ಓದಿದ್ದು, ಒಂದು ಖಾಸಗಿ ಶಾಲೆಯಲ್ಲಿ. ಪ್ರೈಮರಿ ಶಾಲೆಯ ಅವಧಿಯಲ್ಲಿ ಮಾಡಿದ್ದ ಕುಚೇಷ್ಟೆಗಳು, ಆಚರಣೆಗಳ ಕುರಿತಾಗಿ ಒಂದಿಷ್ಟು ಮಾತಿಗಿಳಿದೆವು. ನಾನು ಅದರ ನೆನಪಿನಲ್ಲೊಂದು ಹದಿನೈದು ವರ್ಷಗಳ ಹಿಂದಿನ ಗತಕಾಲದ ವೈಭವವನ್ನು ಮನದಲ್ಲಿಯೇ ಬಯೋಸ್ಕೋಪು ಹಾಕಿ ಓಡಿಸಲಾರಂಭಿಸಿದ್ದೆ. ಏನೇನೆಲ್ಲಾ ಇತ್ತು ಆ ದಿನಗಳಲ್ಲಿ. ಹಾಗಂದುಕೊಂಡರೆ ಏನೀರಲಿಲ್ಲ ಆ ಬದುಕಲ್ಲಿ. ಗೆಳೆಯರೊಟ್ಟಿಗೆ ಇರುತ್ತಿದ್ದ ಅಷ್ಟೂ ವರ್ಷಗಳು ಹೊಸ ವರ್ಷದ ದಿನದಷ್ಟೇ ಕಳೆಗಟ್ಟಿರುತ್ತಿದ್ದವು. ದಿನಾ ಒಂದಿಲ್ಲೊಂದು ನೆಪದಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಸಿಹಿ ತಿಂಡಿ. ಅದೂ ಟೀಚರ್ ಕ್ಲಾಸಲ್ಲಿರುವಾಗ್ಲೇ ಕದ್ದು ತಿನ್ನುತ್ತಿದ್ದ ಮಜಾ. ಮಧ್ಯಾಹ್ನದ ಊಟದ ಹೊತ್ತಿಗೆ ಸಿಹಿ ತಂದವರಿಗೆ ಕಾಯುತ್ತಿದ್ದ ಖಾಲಿ ಡಬ್ಬಿ. ಆಗ ತಿಂದ ಅಷ್ಟೂ ಜನರ ಇಂತಿಷ್ಟು ಊಟದ ಪಾಲು. ಎಲ್ಲಾ ತಿಂದು ಭೂರಿ ಭೂಜನ ಸವಿದ ತೃಪ್ತಿ ಅವರಿಗಾದರೆ, ಸಿಹಿ ತಿಂದ ಖುಷಿ ನಮ್ಮದು. ಈ ಚೇಷ್ಟೆಗಳಿಗೆ ಒಂದು ಕಾಲಾವಧಿಯಲ್ಲಿ ದಿನವೂ ಸಿಹಿತಿಂಡಿ. ಮನೆಯಲ್ಲಿ ಸಾಕೆನಿಸುವಷ್ಟು ತಿಂದು, ಅದರ ಪರ್ಯಾಯವಾಗಿ ಎಲ್ಲರ ಮನೆಯ ಮಧ್ಯಾಹ್ನದ ತಿಂಡಿ ಸವಿಯಲು ಬಾಕ್ಸ್ ತರುತ್ತಿದ್ದದ್ದು ಒಂದು ಹವ್ಯಾಸವೇ ಆಗಿಹೋಯ್ತು.  ಸ್ಕೂಲ್‍ನಲ್ಲಿ ಪ್ರತಿ ವರ್ಷವೂ ಆಚರಿಸುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆಗೆ ಆಯೋಜಿಸುತ್ತಿದ್ದ ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ ಮಾತ್ರವೇ ಅನುದಿನಕ್ಕೂ ನಮ್ಮಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು ತರುತ್ತಿತ್ತು. ಮಾತ್ರವಲ್ಲ, ಬರುವ ವರ್ಷಕ್ಕೆ ನಾವು ಸೀನಿಯರ್‍ಗಳಾಗಿರ್ತೇವೆ ಎನ್ನುವ ಭಾವನೆಯೇ ಇನ್ನಿಲ್ಲದ ಬದುಕಿನೋತ್ಸಾಹವನ್ನು ಇಮ್ಮಡಿ ಮಾಡುತ್ತಿತ್ತು. ಅದಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳಲು, ಟೀಚರ್ಸ್‍ಗಳ ನೆಚ್ಚಿನ ವಿದ್ಯಾರ್ಥಿ ಎನಿಸಿಕೊಳ್ಳಲು ನಾ ಮುಂದು ತಾ ಮುಂದು ಅಂಥ ಇನ್ನಿಲ್ಲದ  ಸಾಹಸಗಳಿಗೆ ಕೈಹಾಕುವುದು ನಮ್ಮ ವರ್ಷದ ರೆಸಲ್ಯೂಷನ್‍ಗಳಾಗಿರುತ್ತಿದ್ದವು. ಹೊಸ ವರ್ಷಾಚರಣೆಯ ಗುಂಗು ಅಚಾನಕ್ಕಾಗೂ ನಮ್ಮ ಗಮನಕ್ಕೆ ಸಿಗುತ್ತಿರಲಿಲ್ಲ. ತೀರಾ ಹೈಸ್ಕೂಲಿನ ಮಟ್ಟಿಗೆ ಬಂದಾಗ ಹ್ಯಾಪಿ ನ್ಯೂಇಯರ್ ಅನ್ನುತ್ತಿದ್ದದ್ದು ಬಿಟ್ಟರೇ, ಹೊಸ ವರ್ಷಕ್ಕೊಂದು ರೆಸಲ್ಯೂಷನ್ ಮಾಡ್ಕೊಬೇಕು. ಅದನ್ನ ಚಾಚುತಪ್ಪದ ಹಾಗೇ ಶಿರಸಾ ಪಾಲಿಸಬೇಕು ಎಂಬ ಯಾವ  ತತ್ವವೂ ನಮಗೆ ಗೊತ್ತಿರಲಿಲ್ಲ. ಎಳೆ ವಯಸ್ಸಿನ ಮುಗ್ಧತೆ ಅಂದ್ರೆ ಅದೇ ಅಲ್ವಾ? ಸ್ಕೂಲಿನ ಅವಧಿ ಇದ್ದಷ್ಟು ನಾವೂ ಹ್ಯಾಪಿ ಹ್ಯಾಪಿಯೇ... ಶಾಲಾ ಅವಧಿಯಲ್ಲೇನಾದ್ರೂ ಅಚಾನಕ್ಕಾಗಿ ರಜೆ ಕೊಟ್ರೆ ಇನ್ನೂ ಹ್ಯಾಪಿಯೇ.. ಯಾಕಂದ್ರೆ ಗೆಳೆಯರೊಟ್ಟಿಗೆ ಮೈದಾನದಲ್ಲೋ, ಮತ್ತೆಲ್ಲೋ ಆಟವಾಡಿ ನಾವು ಮನೆಗೆ  ಹೋಗುತ್ತಿದ್ದದ್ದು ಮಾಮೂಲಿ ಸಮಯಕ್ಕೆ. ಅಷ್ಟೂ ಹೊತ್ತು ಯಾರ ಅಡ್ಡಿಯಿಲ್ಲದೇ ದೇಹ ದಣಿಯವಷ್ಟು ಆಟದಲ್ಲಿ ತೊಡಗಿರುತ್ತಿದ್ವಿ. ಮನಸ್ಸು ಮಾತ್ರ ಇನ್ನಷ್ಟು ಆಟದ ಹುಮ್ಮಸ್ಸಿನಲ್ಲಿಯೇ ಇರುತ್ತಿತ್ತು. ಮತ್ತೊಂದು ರಜೆಗೆ ಕಾಯುತ್ತಿತ್ತು!
ಅಲ್ಲಿಗೆ ಮಾತು ಒಂದು ತಹಬದಿಗೆ ಬಂದು ನಿಂತಿತು. ಹೊಸ ವರ್ಷಾಚರಣೆ ಹೇಗ್ ಮಾಡ್ದೆ ಅಂತ ಆಕೆ ಕೇಳುತ್ತಲೇ, ನಾನು, ನನ್ನ ಹಸ್ಬೆಂಡ್ ಗೋವಾಗೋಗಿದ್ವಿ. ಫನ್ ಆಗಿತ್ತು, ಗ್ರಾಂಡ್ ಪಾರ್ಟಿ ಮಾಡಿದ್ವಿ ಅದೂ ಇದೂ ಅಂತ ಹೇಳುತ್ತಾ ಹೊರಟಳು. ಆದರೆ ಮಾರನೇ ದಿನವೇ ಇಬ್ಬರಿಗೂ ಯಾವುದೋ ವಿಷಯಕ್ಕೆ ಮನಸ್ತಾಪ ಆಗಿ ಮಾತುಕತೆ ಬಂದ್ ಆಗಿದೆ. ನಾನು ಅಮ್ಮನ ಮನೆಗೆ ಬಂದಿದ್ದೆ. ಈ ತಿಂಗಳು ಪೀರಿಯಡ್ಸ್ ಬೇರೆ ಆಗಿಲ್ಲ. ಅದ್ಕೆ ಚೆಕ್ ಅಪ್ ಮಾಡಿಸೋಣ ಅಂತ ಬಂದೆ. ಹಾಗೇನಾದ್ರೂ ಪಾಸಿಟೀವ್ ಇದ್ರೆ ತೆಗೆಸಿಬಿಡೋಣ ಅಂತ ಅಂದ್ಲು.
ಎಲಾ ಇವಳಾ! ಏನಾಶ್ಚರ್ಯ ಬೆರಳೆಣಿಕೆಯಷ್ಟೇ ದಿನದ ಹಿಂದೆ ಗಂಡನೊಟ್ಟಿಗೆ ನ್ಯೂಇಯರ್ ಸೆಲೆಬ್ರೇಷನ್ ಮಾಡಿದ ಖುಷಿಯಲ್ಲಿರಬೇಕಾದವಳು ಹೀಗೆಲ್ಲಾ ಮಾತಾಡುತ್ತಿದ್ದಾಳಲ್ಲ ಅಂತ. ಮನಸ್ತಾಪಕ್ಕೆ ಕಾರಣ ಕೇಳ್ಬೇಕು ಎನಿಸಿದರೂ, ಹಾಗೆಲ್ಲಾ ಕೇಳೋದು ತೀರಾ ಬಾಲಿಶತನವೆನಿಸಿತು. ಆದರೂ ಕೊಂಚ ಅನುಭವದ ಪರಿಧಿಯಲ್ಲಿ ಇದರಿಂದ ಭವಿಷ್ಯದಲ್ಲಾಗುವ ತೊಂದರೆಗಳ ಕುರಿತು ನನಗೆ ತಿಳಿದ ಮಟ್ಟಿಗೆ ಕನ್‍ವಿನ್ಸ್ ಮಾಡೋಕೆ ಟ್ರೈ ಮಾಡ್ದೆ. ಊಹೂ! ಆಕೆ ಕೇಳುವ ಪರಿಸ್ಥಿತಿಯಲ್ಲೇ ಇಲ್ಲ. ತಾನು ಮಾಡುತ್ತಿರುವುದೇ ಸರಿ ಎನ್ನುವ ಊವಾಚ ಮೊದಲೇ ಆಕೆ ಹಾಕಿಕೊಂಡಾಗಿದೆ. ನಾನಾದರೂ ಎಷ್ಟರವಳು. ಬಾಲ್ಯದ ಗೆಳತಿಯಾದರೂ ಕೆಲ ನಿಮಿಷಗಳ ಹಿಂದಷ್ಟೇ ಸಿಕ್ಕವಳು! ಮುಂದೆ ಸಿಗುತ್ತೇವೋ ಇಲ್ಲವೋ ಯಾವ ಗ್ಯಾರೆಂಟಿಯೂ ಇಲ್ಲದವಳು. ಆದರೂ, ನ್ಯೂಇಯರ್ ಸೆಲೆಬ್ರೇಷನ್ ದಿನದ ಬಗ್ಗೆ ಹೇಳುವಾಗಿನ ಅವಳ ಮುಖದ ನಗು, ಆನಂತರದ ವಿಷಯಗಳನ್ನು ಹಂಚಿಕೊಳ್ಳುವಾಗ ಇರಲಿಲ್ಲ. ಆ ಸಮಯಕ್ಕೆ ಮಾಡಿದ ಖರ್ಚು, ಮೋಜು, ಮಸ್ತಿ ಕೇವಲ ನೆನಪಿಗಷ್ಟೇ ಸೀಮಿತವಾಗಿ, ಉಳಿದ ನೋವುಗಳು ಬದುಕಿನ ಪರ್ಯಂತ ತನ್ನ ಅಧಿಪತ್ಯ ಸಾಧಿಸುವುದಾದರೆ! ವರ್ಷಾಚರಣೆಗೆ ಎಲ್ಲಿಯ ಅರ್ಥ?! ಆಗಲೇ ಥಟ್ಟನೆ ಹೊಳೆದದ್ದು, ಈ ವರ್ಷ ತಾನು ನ್ಯೂಇಯರ್ ವಿಷ್ ಹೇಳೋಕು ಕೇಳೋಕು ಮಧ್ಯರಾತ್ರಿ ಎಚ್ಚರದಲ್ಲಿರಲಿಲ್ಲ. ಕಾರಣ, ನಾನೂ ಕೂಡ ಯಾವುದೋ ಕ್ಷುಲ್ಲಕ ಕಾರಣದಿಂದ ಬೇಸತ್ತು, ಯಾವುದರ ಚಿಂತೆಯಿಲ್ಲದೇ, ಮಗನೊಟ್ಟಿಗೆ ಗಡದ್ದು ನಿದ್ದೆಗೆ ಜಾರಿಬಿಟ್ಟಿದ್ದೆ ಎಂಬುದು ನೆನಪಾಯ್ತು. ನೂತನ ವರ್ಷ ಆಚರಿಸಿದೇವೋ ಇಲ್ಲವೋ ಮುಖ್ಯವಲ್ಲ. ಅದು ಗತಿಸಿದ ಸಂಗತಿ. ಬದುಕಿನ ಆಚರಣೆ ಸಕಾಲದಲ್ಲಿ ಮಾಡದಿದ್ದರೆ ನಮ್ಮಂತಹ ನಿರುತ್ಸಾಹಿಗಳು ಬೇರೊಬ್ಬರಿರಲ್ಲ ಎಂಬುದರ e್ಞÁನೋದಯ ಅಂದು ಕಾಫಿ ಡೇನಲ್ಲಿ  ನನಗಾಯ್ತು.....

- ಭಾಚಿ